Sunday, May 9, 2010

ಯಾಂತ್ರಿಕ ಬದುಕಿಗೆ ಬ್ರೇಕ್ ಹಾಕುವ ವೈಭವ - ಈ ಪ್ರವಾಸದ ಅನುಭವ (ಭಾಗ - 2)

(ಭಾಗ 1 ರಿಂದ ಮುಂದುವರಿಕೆ...)


ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯೋ!


ಆಗುಂಬೆಯಲ್ಲೇ ಉಳಿಯುವ ಪ್ಲಾನ್ ಇದ್ದ ನಾವು ಗುಂಡನ ಸಲಹೆಯಂತೆ ಶೃಂಗೇರಿಯತ್ತ ಹೊರಟೆವು. ನಡುವೆ ಚೆಕ್ ಪೋಸ್ಟ್ನಲ್ಲಿ ಯಾರೋ ಇನ್ಸ್ ಪೆಕ್ಟರ್ ನ ವಿಚಾರಣೆಯಿಂದ ನಮ್ಮ ಗುಂಡನ ಮೂರನೇ ಹೆಸರು ಪರಿಚಯವಾಯಿತು, 'ಬಾಬು' ಎಂದು. ಬಹುಷಃ ತನ್ನ ಮುಸಲ್ಮಾನ ಹೆಸರನ್ನು ಹೇಳಿದರೆ ತೊಂದರೆಯಾಗಬಹುದೇನೋ ಎಂಬ ಕಾರಣಕ್ಕೆ ತನ್ನ ನಿಜನಾಮ ಕೇಳಲಿಲ್ಲವೇ ಎಂಬ ಅನುಮಾನ ಬಂತು. ತನ್ನ ಹೆಸರು ಮರೆ ಮಾಚುವ ಅನಿವಾರ್ಯತೆಯನ್ನು ಸೃಷ್ಟಿಸಿದ್ದು ಈ ಹಿಂದೂ - ಮುಸಲ್ಮಾನ್ ಭೇದದಿಂದಲ್ಲವೇ ಎನಿಸಿತು. ಆಗಷ್ಟೇ ಅನುಭವಿಸಿದ್ದ ಪ್ರಕೃತಿಯ ಹಿರಿತನ ಮತ್ತು ಈ ಮನುಷ್ಯನ ಕಾಂಪ್ಲೆಕ್ಸಿಟೀಸ್ ನ ಕನಿಷ್ಟತೆ ಎರಡೂ ಜಕ್ಷ್ಟಪೋಸ್ ಆಗಿ ಕಾಣುತ್ತಿತ್ತು. ಅಷ್ಟರಲ್ಲೇ ಬಂದಿತ್ತು ಶೃಂಗೇರಿ ತೀರ್ಥ. ಅಲ್ಲೇ ಒಂದು ಕಾಟೇಜ್ ರೂಂ ಬುಕ್ ಮಾಡಿ ನಿರಾಳವಾಗಿ ದೇವಸ್ಥಾನದಲ್ಲೇ ಊಟ ಮುಗಿಸಿ ರೂಮಿಗೆ ಮರಳಿ ಮಲಗಿದ್ದಷ್ಟೇ ಗೊತ್ತು, ಬೆಳಕು ಹರಿದಿತ್ತು. ಲಘುಬಗೆಯಿಂದ ಸಿದ್ಧರಾಗಿ, ಶಾರದಾದೇವಿ ಮತ್ತು ಆದಿ ಶಂಕರರ ದೇವಸ್ಥಾನಕ್ಕೆ ಹೊರಟೆವು. ಶೃಂಗೇರಿಯ ಆ ಪ್ರಾಚೀನ ದೇವಸ್ಥಾನ ನಯನ ಮನೋಹರವಾಗಿತ್ತು. ಮುಂಜಾನೆಯ ತುಂತುರಿನಲ್ಲಿ ತೊಯ್ದ ಆ ಆಲಯ ಮತ್ತಷ್ಟು ತಾಜಾತನದಿಂದ ತುಂಬಿತ್ತು. ಕಂಡೊಡನೆಯೇ 'ಶಿಲೆಯಲ್ಲ ವೀ ಗುಡಿಯು ಕಲೆಯ ಬಲೆಯು' ಎಂಬ ಕವಿವಾಣಿಯು ನೆನಪಾಯಿತು.

ಹೊಯ್ಸಳ ಶೈಲಿಯ ಆ ದೇವಸ್ಥಾನ ನಕ್ಷತ್ರಾಕಾರದಿಂದ ರಚಿತವಾಗಿತ್ತು. ಆರ್ಕಿಟೆಕ್ಚರ್ ನ ಅಭ್ಯಸಿಸುತ್ತಿರುವ ನನ್ನ ತಂಗಿಯ ಮೂಲಕ ಕಟ್ಟಡದ ರಚನೆಯ ಬಗ್ಗೆ ಮತ್ತಷ್ಟು ಮಾಹಿತಿ ದೊರೆಯಿತು. ನಂತರ ಕಟ್ಟಡದ ಸುತ್ತಲೂ ಜೀವಂತಿಸಲ್ಪಟ್ಟ ಶಿಲ್ಪಗಳನ್ನು ಸೂಕ್ಷ್ಮವಾಗಿ ಗಮನಿಸತೊಡಗಿದೆವು. ಒಂದೊಂದು ಶಿಲ್ಪ ಒಂದೊಂದು ಕಥೆ ಹೇಳುತ್ತಿತ್ತು. ಯುದ್ಧ, ಆನಂದ, ಸಂಗೀತ, ಅವತಾರಗಳು, ನೃತ್ಯ ಇತ್ಯಾದಿ ಇತ್ಯಾದಿ. ಬಹುಷಃ ಅದರ ಡೀಟೈಲ್ಸ್ ಸ್ಟಡಿ ಮಾಡಿದರೆ ಒಂದು ಚರಿತ್ರೆಯ ಸಮಗ್ರ ಕಥೆಯೇ ತಿಳಿಯಬಹುದೇನೋ ಎನಿಸಿತ್ತು. ಮೈ ನವಿರೇಳಿಸುವಂತಹ ಆ ಶಿಲ್ಪಗಳು ಅದನ್ನು ಕೆತ್ತಲ್ಪಟ್ಟ ಕಲಾವಿದರ ಸಂಯಮ, ಕೌಶಲ್ಯತೆಗೆ ಮೂಕ ಸಾಕ್ಷಿಯಾಗಿತ್ತು. ಅದನ್ನೇ ನೋಡುತ್ತಾ ನನ್ನ ತಂಗಿ ಅದರ ಬಿಂಬವನ್ನೂ ಬಿಡಿಸಿದ್ದಳು. ಆ ದೇವಸ್ಥಾನದಲ್ಲಿ ಮೈನಸ್ ಪಾಯಿಂಟ್ ಆದದ್ದು ಎಂದರೆ, ಆ ಜನ ಜಂಗುಳಿ ಜನ ಮರುಳೋ ಜಾತ್ರೆ ಮರುಳೋ ಎಂಬಂತೆ ಗುಂಪುಗುಂಪಾಗಿ ಜಮಾಯಿಸತೊಡಗಿತು. ಸಾಕಷ್ಟು ಭಕ್ತರು, ತೋರಿಕೆಯ ಭಕ್ತರು ಮತ್ತಷ್ಟು ಪ್ರವಾಸಿ ಹುರುಪಿನಿಂದ ಬಂದವರು ಇನ್ನಷ್ಟು. ಒಟ್ಟಿನಲ್ಲಿ ಅವರೆಲ್ಲರೊಟ್ಟಿಗೆ ನಾವೂ ಸಾಕಷ್ಟು ಸಮಯ ದೇವಸ್ಥಾನದಲ್ಲಿ ಕಳೆದು, ನಮ್ಮ ಪ್ರಯಾಣ ಮುಂದುವರೆಸಿದೆವು.


ಸಿರಿಮನೆಯ ಸೊಬಗು


ಶೃಂಗೇರಿಯ ರುಚಿಯನ್ನು ಸವಿದ ನಂತರ ನಮ್ಮ ಮುಂದಿನ ಪ್ರಯಾಣ ಸಿರಿಮನೆ (ಕಿಗ್ಗ) ಜಲಪಾತದೆಡೆಗೆ. ಹಸಿರು ಕಾಡಿನ ನಡುವೆ ಬಿಳಿವಾಲಿನಂತಿರುವ ಆ ಜಲಪಾತಗಳು, ಝರಿ ತೊರೆಗಳು ನನಗೆ ಅತ್ಯಂತ ಪ್ರಿಯವಾದ ಸ್ಥಳ. ಅದೇ ಭಾವಾವೇಶದಿಂದಲೇ ಉತ್ಸುಕಳಾಗಿ ಮುನ್ನಡೆದೆ. ಶೃಂಗೇರಿ ಇಂದ 20 ಕಿ ಮೀ ದೂರದಲ್ಲಿರುವ ಸಿರಿಮನೆಯ ದಾರಿಯೂ ಅಷ್ಟೇ ಸೊಗಸಾಗಿತ್ತು. ಜಲಪಾತದ ಹತ್ತಿರ ಪಾದಸ್ಪರ್ಶ ಮಾಡಿದ ಕೂಡಲೇ ಝರಿಯ ಮೊರೆತ ಕೇಳಿ ಪುಳಕಗೊಂಡೆ. ಬೇಸಿಗೆಯಾದ್ದರಿಂದ ಎಂದಿನಂತೆ ಝರಿ ತುಂಬಿ ಹರಿಯದಿದ್ದರೂ, ಸಾಕಷ್ಟು ರಭಸದಿಂದ ಝೇಂಕರಿಸುತ್ತಿತ್ತು. ನೀರು ಮೊಳಕಾಲ್ಮುಳುಗುವಷ್ಟು ಇಳಿದೆವು. ಅಲ್ಲೇ ನಮ್ಮಂತೆ ನೀರಾಟವಾಡುತ್ತಿದ್ದ ದೊಡ್ಡ ಹೆಂಗಸೊಬ್ಬರು ಹಿಂಜರಿಯುತ್ತಿದ್ದ ನಮ್ಮನ್ನು ಕಂಡು "ಬಾಮ್ಮಾ, ಇಂತಾ ಅನುಭವ ಮತ್ತೆ ಸಿಗದು. ಸಿಕ್ಕಾಗ ಎಂಜಾಯ್ ಮಾಡಬೇಕು" ಎಂದು ತಮ್ಮ ಸ್ನೇಹ ಹಸ್ತ ಚಾಚಿದರು. ಆ ನೀರಿನಲ್ಲಿಳಿದು ಎಲ್ಲ ಹಿಂಜರಿಕೆ ತೊರೆದು ಚೆನ್ನಾಗಿ ನೆನೆದು ಝರಿಯನ್ನನುಭವಿಸಿದೆವು. ಅಲ್ಲಿ ನೆರೆದಿದ್ದ ಜನರಿಗೂ ನಮಗೂ ಯಾವ ನಂಟಸ್ತಿಕೆಯಿಲ್ಲದಿದ್ದರೂ ಈ ಪ್ರಕೃತಿಯ ಮಡಿಲಲ್ಲಿ ನಾವೆಲ್ಲರೂ ಒಂದೇ ಆಗಿದ್ದೆವು. ಎಲ್ಲರೂ ಅವರ ಎಲ್ಲ ಟೆನ್ಶನ್, ಸ್ಟೇಟಸ್ ಬಿಟ್ಟು ಆ ಕ್ಷಣಕ್ಕೆ ಕಾಡಿನ ಮಕ್ಕಳಾಗಿದ್ದರು. ಸಮಯದರಿವೆಯೇ ಆಗಲಿಲ್ಲ!




ಸಾಹಿತ್ಯ - ಸಂಸ್ಕೃತಿಯ ಕೇತನ - ಕುಪ್ಪಳಿ


ಎಲ್ಲವೂ ಮುಗಿದಿತ್ತು. ಕೊನೆಗೆ ಉಳಿದಿತ್ತು ನಮ್ಮ ಕೇಂದ್ರೀಕೃತ, ಟ್ರಿಪ್ಪೋದ್ದೇಶೀ ಸ್ಥಳ ಕುಪ್ಪಳಿ. ಕುವೆಂಪುರವರ ನಿವಾಸ. ನೀರಾಟದಿಂದ ದಣಿದಿದ್ದರೂ, ಈಗಿನ್ನು ತೆರಳುವ ಸ್ಥಳದ ಬಗೆಗೆ ಉತ್ಸುಕತೆ. ಅದೇ ಉತ್ಸಾಹಕ್ಕೆ ಮತ್ತಷ್ಟು ಜೀವ ತುಂಬುವಂತೆ ಚಿಕ್ಕಮಗಳೂರಿನ ಕಾಡ ಸೌಂದರ್ಯ ಸಿರಿ. ಅದೇ ಕಾಡ ರಸಹೀರಿ ಮುಂದುವರೆಯುತ್ತಿದ್ದಾಗ ನಮಗೆ ಕಾಣಸಿಕ್ಕಿದ್ದು ಕುವೆಂಪುರವರ ತಾಯಿಯ ತವರೂರಾದ ಹಿರೇಕೊಡುಗೆ. ಅದೇ ಕುವೆಂಪುರವರ ಜನ್ಮ ಸ್ಥಳ. ಅವರ ಮನೆಯನ್ನು ಈಗ ಕುವೆಂಪು ಸಂದೇಶ ಭವನವನ್ನಾಗಿ ನಿರ್ಮಿಸಿದ್ದಾರೆ. ಕುವೆಂಪುರವರ ವಿಗ್ರಹ ಮೂರ್ತಿಯನ್ನು ಕೆತ್ತಿ ಸುತ್ತಲೂ ಅವರ ಬರಹಗಳನ್ನಿಳಿಸಿ ಅಲಂಕರಿಸಿದ್ದರು. ಖೇದವೆಂದರೆ ಆ ಸ್ಥಳ, ಪರಿಚಾರಕರು ಯಾರೂ ಇರದೇ ಅನಾಥವಾಗಿತ್ತು.

ಅಲ್ಲಿಂದ ಹೋರಾಟ ನಾವು, ಕುವೆಂಪುರವರ ಸ್ಪೂರ್ತಿಯ ಸೆಲೆಯೂ, ಅವರ ಸಮಾಧಿಯೂ ಆದ ಕವಿಶೈಲಕ್ಕೆ ಹೊರಟೆವು. ಅದೊಂದು ರೋಮಾಂಚಕಾರೀ ಸ್ಥಳ. ಆ ಸಮಾಧಿಯ ರಚನೆ, ಅದರ ಸುತ್ತಲೂ ಮೂಕ ಸ್ಥಂಬಗಳಂತೆ ನಿಂತ ಆ ಕಲ್ಗಂಬಗಳು ಕುವೆಂಪುರವರ ಘನತೆಗೆ ಸಾಕ್ಷೀಭೂತವಾಗಿತ್ತು. ಎಲ್ಲಿ ನೋಡಿದರೂ ಕುವೆಂಪುರವರ ನುಡಿಮುತ್ತುಗಳ ಕಲ್ಬರಹಗಳು, ನಳನಳಿಸುತ್ತಿದ್ದವು. ಅಲ್ಲಿ ಕಂಡ ಕುವೆಂಪುರವರ ಸ್ವಹಸ್ತಾಕ್ಷರ, ಅವರು ಧ್ಯಾನಿಸುತ್ತಿದ್ದ ಸ್ಥಳ, ಸುತ್ತಲಿನ ಪ್ರಕೃತಿ ನೋಟ, ಆ ವೈಭವೋಪೇತ ನಿಶ್ಯಬ್ಧತೆಗಳೆಲ್ಲವೂ ಕುವೆಂಪುರವರನ್ನು ಜೀವಂತ ಕಂಡಂತೆ ಅನುಭವ ತಂದಿತ್ತು.

ಕವಿಶೈಲದಿಂದ ಕುವೆಂಪುರವರ ಮನೆಗೆ ಕಾಲುದಾರಿಯಿದೆ. ಅದೇ ದಾರಿಯಲ್ಲೇ ಕುವೆಂಪುರವರು ಗಮಿಸುತ್ತಿದ್ದರಂತೆ. ಕಾಡಿನ ಮಧ್ಯದ ಆ ಕಾಲುದಾರಿಯಲ್ಲಿ ನಡೆದೇ ಹೋಗುವ ಹಂಬಲ ತೀವ್ರವಾಗಿದ್ದರೂ ಮಳೆರಾಯ ನಮ್ಮ ಸಾಥ್ ನೀಡಲಿಲ್ಲ. ಸರಿ, ಕಾರ್ನಲ್ಲೇ ಹೊರಟೆವು.

ಕಾರಿನಿಂದಿಳಿದ ಕೂಡಲೇ ಧುತ್ತೆಂದು ಪ್ರತ್ಯಕ್ಷವಾದದ್ದು ಮತ್ತೊಂದು ಅದ್ಭುತ, ವೈಭವಯುತ ಚರಿತ್ರೆ! ಇಡೀ ಕುಪ್ಪಳಿಗೆ ಇದ್ದದ್ದೇ ಒಂದೇ ಮನೆ. ಅದೇ ಕುವೆಂಪುರವರ ಮನೆ. 250 ವರ್ಷಗಳಷ್ಟು ಪ್ರಾಚೀನವಾದ ಹಾಳುಗೆಡವಿದ್ದ ಆ ಕಟ್ಟಡವನ್ನು ಮತ್ತೆ ಅದೇ ರಚನೆಯಲ್ಲೇ ಪುನರುಜ್ಜೀವನಗೊಳಿಸಿ ಜೀವಂತವಾಗಿಸಿದ್ದಾರೆ. ಮನೆ, ಮನೆಯಲ್ಲಿ ಉಪಯೋಗಿಸುತ್ತಿದ್ದ ಪಾತ್ರೆ, ಪರಡಿ, ಬಟ್ಟೆ, ಕೊಠಡಿಗಳು, ಬಾಣಂತಿ ಕೊಠಡಿ, ಕಣಜ ಇತ್ಯಾದಿಗಳಿಂದ ಆ ಕುಪ್ಪಳಿ ಮನೆಯವರ ಸಂಸ್ಕೃತಿಯನ್ನೇ ಮರು ಸೃಷ್ಟೀಕರಿಸಿರುವುದು ಅನುರಣನೀಯವಾಗಿತ್ತು. ಮತ್ತೊಂದು ಗಮನ ಸೆಳೆವ ಅಂಶವೆಂದರೆ, ಕುವೆಂಪುರವರು ಉಪಯೋಗಿಸುತ್ತಿದ್ದ ಬಟ್ಟೆಗಳು, ಲೇಖನಿ, ಕನ್ನಡಕ, ಶೇವಿಂಗ್ ರೆಜರ್ ಇತ್ಯಾದಿ. ಎಲ್ಲವೂ ಆಕರ್ಷಕವಾಗಿ, ದುಬಾರಿಯಾಗಿ ಇದ್ದುದು ಕುವೆಂಪುರವರ ಸೌಂದರ್ಯ ಪ್ರಜ್ಞೆ ಮತ್ತು ಆಸಕ್ತಿಗಳನ್ನು ಸಾರುತ್ತಿತ್ತು. ಅವರ ಪ್ರಶಸ್ತಿ, ಪುರಸ್ಕಾರಗಳಿಗಂತೂ ಲೆಕ್ಕವೇ ಇಲ್ಲ! ಅದರಲ್ಲಿ ಅತ್ಯಂತ ಗಮನ ಸೆಳೆದದ್ದು ಕರ್ನಾಟಕ ರತ್ನ ಪ್ರಶಸ್ತಿ. ಗಾತ್ರದಲ್ಲಿ ದೊಡ್ಡದಾದ, ಗಂಭೀರವಾದ ಆ ಶ್ರೇಷ್ಠ ಪ್ರಶಸ್ತಿಯ ನೋಟ ಮನಸೂರೆಗೊಂಡಿತ್ತು.

ಅವರ ಸಾಹಿತ್ಯ ಕೃಷಿಯ ಆಗರವೇ ಆದ ಆ ಮನೆಯ ಒಂದು ಕೊಠಡಿಯಲ್ಲಿ ಎಲ್ಲ ಕೃತಿಗಳನ್ನೂ, ರಚನೆಗಳನ್ನೂ ಪ್ರದರ್ಶಿಸಿದ್ದರು. ಅದರಲ್ಲಿ ಅತ್ಯಂತ ಗಮನ ಸೆಳೆದದ್ದು, ಅವರ ಸ್ವಹಸ್ತಾಕ್ಷರದ ಮುದ್ರೆಯಾದ 'ಶ್ರೀ ರಾಮಾಯಣ ದರ್ಶನಂ' ಮಹಾಕಾವ್ಯ. ಇವೆಲ್ಲವನ್ನೂ ವೀಕ್ಷಿಸಿ, ಕಣ್ತುಂಬಿ ಪುಳಕಗೊಂಡಿದ್ದ ನಾವು ಫೋಟೋಗ್ಯಾಲರಿ ಹೊಕ್ಕೆವು. ಕುವೆಂಪುರವರ ಫೋಟೋಗ್ಯಾಲರಿಯಂತೂ ನಮಗೆ ಮತ್ತೊಂದು ಇನ್ಫೋ ಟೈನ್ ಮೆಂಟ್ ಆಗಿತ್ತು. ಕುವೆಂಪುರವರು ಚಿಕ್ಕದಾಗಿದ್ದಂದಿನಿಂದ ಕೊನೆಯುಸಿರೆಳೆಯುವವರೆಗಿನ ಸಾಕಷ್ಟು ಫೋಟೋಗಳು ಅವರ ಜೀವನದ ಗತ ವೈಭವವನ್ನು ಸಾರುತ್ತಿತ್ತು.

ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ದಿ ಗ್ರೇಟ್ ಸೌಲ್ ಕುವೆಂಪುರವರು ಕಾಲವಾದ ಘಳಿಗೆ ರಾತ್ರಿ 1.00 ಘಂಟೆ. ಆದ್ದರಿಂದ ಅವರ ಮಗಳ ಸಲಹೆಯಂತೆ, ಕುವೆಂಪುರವರ ವಿಗ್ರಹದ ಹಿಂದೆ ಗಡಿಯಾರವಿರಿಸಿ ಅದರ ಸಮಯವನ್ನು ಒಂದು ಘಂಟೆಗೆ ನಿಲ್ಲಿಸಲಾಗಿದೆ. ಇದನ್ನು ಕಂಡ ನಮಗೆ ಒಂದು ಕ್ಷಣ ಉಸಿರುಗಟ್ಟಿತ್ತು. ಎಲ್ಲವನ್ನೂ ನಿಧಾನವಾಗಿ ಅರಗಿಸಿ ಅನುಭವಿಸುತ್ತಿದ್ದ ನಮಗೆ ಸಮಯ ಹೋದದ್ದೇ ತಿಳಿಯಲಿಲ್ಲ. ಒಂದೆರಡು ಪುಸ್ತಕಗಳನ್ನು ಕೊಂಡು, ನಂತರ ಮನೆಮುಂದಿದ್ದ ಕೃಷಿ ಕೊಠಡಿಗೆ ನಡೆದೆವು. ಅಲ್ಲಿ ಅವರು ಕೃಷಿಗೆಂದು ಉಪಯೋಗಿಸುತ್ತಿದ್ದ ಸಲಕರಣೆಗಳು ಮತ್ತದರ ನಾಮ ಫಲಕಗಳೂ ಇದ್ದವು. ಒಟ್ಟಾರೆ, ಆ ಮನೆ ಕುವೆಂಪುರವರ ಜೀವನ ಶೈಲಿಯ, ಅವರ ಪಾಂಡಿತ್ಯದ ಮತ್ತು ಅವರ ವ್ಯಕ್ತಿತ್ವದ ಒಂದು ಸಂಕೇತವಾಗಿತ್ತು. ಮನೆಯ ಮುಂದಿನ ಜಗುಲಿಯ ಮೇಲೆ ಕೂತು ಮತ್ತೊಂದಿಷ್ಟು ಪ್ರಕೃತಿಯ ಸ್ವಾದವನ್ನು ಆಸ್ವಾದಿಸಿ, ಆನಂದಿಸಿ ಹೊರಟೆವು. ಅಲ್ಲೇ ಮನೆಯ ಪಕ್ಕದ ಪುಟ್ಟ ಅಂಗಡಿಯಲ್ಲೇ ಖಾನಾವಳಿಯ ವ್ಯವಸ್ಥೆಯೂ ಆಯಿತು. ಕೊನೆಗೊಮ್ಮೆ ಮನೆಕಡೆ ತಿರುಗಿ ನೋಡಿ, ಕಾರು ಹತ್ತಿ ನಮ್ಮ ದಾರಿ ಹಿಡಿದೆವು.


ಕ್ಷೇಮವಾಗಿ, ಲಾಭವಾಗಿ....


ಕಾರು ಬೆಂಗಳೂರಿನತ್ತ ಮುಖಮಾಡಿತ್ತು. ಮನ ಕವಿಶೈಲವನ್ನೇ ಗುನುಗುತ್ತಿತ್ತು. ಮರಳಿ ಬೆಂಗಳೂರಿಗೆ ಹೋಗಲೇ ಬೇಕೇ? ಎನಿಸಿತ್ತು. ಅದೇ ಆಫೀಸ್, ಮನೆ, ಟ್ರಾಫಿಕ್, ಕಾಂಪಿಟೆಶನ್, ಡಿಪ್ಲೊಮಸಿ! ಛೆ ನಾವೂ ಈ ರೀತಿ ಹಳ್ಳಿಯಲ್ಲಿರಬಾರದಿತ್ತೆ ಎಂದೆನಿಸಿತ್ತು. 'ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ' ಎಂಬ ಅಡಿಗರ ಸಾಲು ನೆನಪಾಗಿ ನಗು ಬಂದಿತ್ತು. ಹೊರಡುವುದು ಮರಳಿ ಮನೆಗೆ ಆದರೂ ಈ ಪ್ರವಾಸ ಒಂದು ಹೊಸ ಅನುಭವವನ್ನು ದಕ್ಕಿಸಿತ್ತು. ಆ ಕಾಡಿನ ಪ್ರಕೃತಿಯು ಮೆಟಫಿಸಿಕಲ್ ಟಚ್ ನ ಅನುಭೂತಿ ನೀಡಿತ್ತು. ಹೊಸ ಆಯಾಮಗಳ, ಹೊಸ ಹುರುಪುಗಳ ಲಾಭ ನಮ್ಮದಾಗಿತ್ತು.

ಪ್ರಯಾಣದಲ್ಲಿ (ಕಾರಲ್ಲಿ ಕೂತೆ!) ಸಾಕಷ್ಟು ದಣಿದ ನಾವು ಕಾರಲ್ಲೇ ಚೆನ್ನಾಗಿ ನಿದ್ರಿಸಿದ್ದೆವು. ಕನಸಿನಲ್ಲಿ ಮತ್ತೆ ಕವಿಶೈಲದ ಬಂಡೆಗಳು ಕನವರಿಸಿತ್ತು! ಅಪ್ಪ ಎಚ್ಚರಿಸಿದಾಗಲೇ ತಿಳಿದ್ದದ್ದು ನಾವು ಆಗಲೇ ಬೆಂಗಳೂರನ್ನು ತಲುಪಿದ್ದೆವೆಂದು. ಯಾವ ನಾಯಿಯನ್ನು ಕಂಡರೂ ನೆನಪಾಗುತ್ತಿದ್ದ ಚೂಟಿಯನ್ನು ಅಂತೂ ವಾಪಸ್ ಕರೆತಂದು ಮನೆ ಸೇರಿದ್ದವು. ಅದರ ಆನಂದಕ್ಕಂತೂ ಪಾರವೇ ಇಲ್ಲ! ಗುಂಡ ತನ್ನ ಪೇಮೆಂಟ್ ಪಡೆದು ನಮ್ಮೆಲ್ಲರಿಗೂ 'ಬೈ' ಮಾಡಿ ಹೊರಟಿದ್ದ.

ಅಂತೂ ಈ ಪುಟ್ಟ ಪ್ರವಾಸ ನಮ್ಮ ದಿನನಿತ್ಯದ ಯಾಂತ್ರಿಕ ಜೀವನಕ್ಕೆ ಒಂದು ಬ್ರೇಕ್ ಹಾಕಿದಂತಿತ್ತು!

7 comments:

sunaath said...

ಕನಸು,
ಚೆನ್ನಾಗಿ ವಿವರಿಸಿದ್ದೀರಿ. ನಾನೇ ಅಲ್ಲಿರುವೆನೇನೋ ಎನ್ನುವಂತಹ ಭಾವ ಬರುತ್ತದೆ!

kanasu said...

Thanks kaka! bareyode maretu hoitenu annisittu....nimma comment nodi khushi aitu :)

ತೇಜಸ್ವಿನಿ ಹೆಗಡೆ said...

ಭಾಗ - ೧ ಮತ್ತು ೨ ಎರಡನ್ನೂ ಒಟ್ಟಿಗೇ ಓದಿದೆ. ಸರಾಗವಾಗಿ, ಸ್ವಾರಸ್ಯಕರವಾಗಿ ಬರೆದಿರುವಿರಿ ಪ್ರವಾಸ ಕಥನವನ್ನು. ಬರವಣಿಗೆಯ ಪಯಣವನೂ ಹೀಗೇ ಮುಂದುವರಿಯಲಿ. ಈ ಕೆಳಗಿನ ಸಾಲು ಯಾಕೋ ತುಂಬಾ ಇಷ್ಟವಾಯಿತು.. :)

" ಅಲ್ಲಿ ನೆರೆದಿದ್ದ ಎಲ್ಲರೂ ಏಕತಾನದಿಂದ ಕಾಯುತ್ತಿದ್ದುದು ಬೆಳಕನೀವ ಭಾನುವನ್ನು ಮುಳುಗಿಸುವುದಕ್ಕೆ?"

kanasu said...

Thank you, Tejaswiniavare :)

ವಾಣಿಶ್ರೀ ಭಟ್ said...

tumba sudravaagide..
biduvinallomme beti kodi

www.vanishrihs.blogspot.com

Ravi Hegde said...

ಪ್ರವಾಸ ಕಥನ..ನಾನು ಪ್ರವಾಸಕ್ಕೆ ಹೋದ ಅನುಭವವಾಯಿತು

ravi

kanasu said...

Thanks Ravi :)