Sunday, May 9, 2010

ಯಾಂತ್ರಿಕ ಬದುಕಿಗೆ ಬ್ರೇಕ್ ಹಾಕುವ ವೈಭವ - ಈ ಪ್ರವಾಸದ ಅನುಭವ (ಭಾಗ - 1)



ಬ್ರೇಕ್ ಹಾಕುವ ಮೊದಲು


ಎಂದಿನಂತೆ ಸುಖಾಸುಮ್ಮನೆ ಆಫೀಸಿಗೆ ಹೊರಡಲು ಸಿದ್ಧಳಾಗುತ್ತಿದ್ದ ನನಗೆ ಶೇವ್ ಮಾಡುತ್ತಿದ್ದ ಅಪ್ಪ ರೇಜರ್ನನ್ನು ಬಟ್ಟಲಿಗೆ ಕೆಡವುತ್ತ ಹೇಳಿದ ಮಾತು ಕೇಳಿ ಕಿವಿ ನೆಟ್ಟಗಾಯಿತು. ಲಘುಬಗೆಯಿಂದ ಹೋಗಿ ಕೇಳಿದೆ. ಹೌದು ನಾನು ಸರಿಯಾಗೇ ಕೇಳಿದ್ದೆ. ಬಹುದಿನಗಳ ಆಲೋಚನೆಯಿಂದಲೋ ಅಥವಾ ಅಮ್ಮನ ಪೀಡಿಕೆಯಿಂದಲೋ ಅಪ್ಪ ನಮ್ಮೆಲ್ಲರೊಡನೆ ಒಂದು ವೀಕ್ ಎಂಡ್ ಟ್ರಿಪ್ ಹೊರಡಲು ಸಿದ್ಧರಾಗಿದ್ದರು. ಎಲ್ಲರಿಗೂ ಲವಲವಿಕೆ! ಇನ್ನು ಹೊರಡುವ ಮಾತು, ಬಹುಕಡಿಮೆ (ಅಂದರೆ ಒಂದು ದಿನದ) ಸಮಯದಲ್ಲಿ ಹೊರಡುವ ಸ್ಥಳ ನಿರ್ಧರಿಸಿ, ಪ್ರಯಾಣದ ಆಯ್ಕೆ ನಿರ್ಧರಿಸಿ, ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ಮನೆಯ ಮುದ್ದಿನ ಕೂಸಾದ ಚೂಟಿ (ನಾಯಿಮರಿ) ಯ ಇರುವಿಕೆಗೆ ಒಂದು ವ್ಯವಸ್ತೆ ಮಾಡಬೇಕಿತ್ತು! ನಮ್ಮ ಇದೇ ಮಾತುಕತೆಯಲ್ಲಿ ಪರೋಕ್ಷವಾಗಿ ಭಾಗಿಯಾಗಿದ್ದ ನಮ್ಮ ಮನೆ ಕೆಲಸದಾಕೆ ಮಂಗಳಮ್ಮ, ನೆಲ ಸಾರಿಸುತ್ತಾ "ನೀವು ಹೋಗಿ ಬನ್ರಿ, ಅದರ ಚಿಂತೆ ನಿಮಗ್ಯಾಕೆ, ನಾನ್ ನೋಡ್ಕೋತೀನಿ" ಎಂದರು. ಆ ಮಾತಿನಿಂದ, ನಮ್ಮ ಅರ್ಧ ಭಾರ ಕಡಿಮೆಯಾದಂತಾಯಿತು. ಹೇಗೋ ಏನೋ ಎಂಬ ಯೋಚನೆ ಬಂದರೂ, ಆಕೆಯ ನಡವಳಿಕೆ, ಜವಾಬ್ದಾರಿ ತಿಳಿದಿದ್ದ ನಾವೆಲ್ಲರೂ ಸಮಾಧಾನಗೊಂಡೆವು. ಮುದ್ದು ಮರಿಯನ್ನು ಅವರೊಡನೆ ಬಿಟ್ಟಿರಲು ಒಪ್ಪಿದೆವು.

ಇಷ್ಟರಲ್ಲೇ ಘಂಟೆ ಒಂಭತ್ತಾಗಿತ್ತು. ತರಾತುರಿಯಲ್ಲಿ ಹಣೆ ಬಟ್ಟಿಡುತ್ತಲೇ ಹೇಳಿದೆ, "ಅಪ್ಪಾ, ಕುವೆಂಪುರವರ ಮನೆ ನೋಡಿ ಬರೋಣ" ಎಂದು. ಇತ್ತೀಚೆಗಷ್ಟೇ ಕುವೆಂಪುರವರ 'ಶ್ರೀ ರಾಮಾಯಣ ದರ್ಶನಂ' ಓದಲು ಪ್ರಾರಂಭಿಸಿದ್ದ ನಾನು ಅದರ ಭಾಷೆ - ಭಾವಗಳಿಂದ ಪುಳಕಗೊಂಡಿದ್ದೆ. ಅದರ ದಾರ್ಶನಿಕತೆಗೆ ಮಾರುಹೋಗಿದ್ದೆ. ಕುವೆಂಪುರವರು ಹುಟ್ಟಿ ಬೆಳೆದ ವಾತಾವರಣ, ಆ ಪ್ರಕೃತಿಯ ಸೌಂದರ್ಯ ಅವರ ಬರಹಗಳ ಸ್ಪೂರ್ತಿಯ ಸೆಲೆಯಾಗಿತ್ತು ಎಂದಿದ್ದ ಅಪ್ಪನ ಮಾತು ನೆನಪಾಗಿ, ಅದನ್ನೇ ನೋಡಬಹುದೆಂಬ ಹಂಬಲವಾಯಿತು. ಅಪ್ಪ ಸ್ವತಹ ಕವಿ, ಕನ್ನಡಾಧ್ಯಾಪಕರು ಇನ್ನು ಕೇಳಬೇಕೆ! ಅವರಿಗೂ ನನ್ನ ಸಲಹೆ ಸೂಕ್ತವಾಗಿ ತೋರಿತು. ಆದರೆ ಅದರ ಜೊತೆಗೆ ನೋಡಿ ಬರುವ ಸ್ಥಳಗಳನ್ನು ಆಯ್ಕೆ ಮಾಡಬೇಕಲ್ಲ. ಎಲ್ಲರು ಯೋಚಿಸುವ ಎಂದು ಹೇಳಿ, ಗಡಿಯಾರನೋಡಿದೆ, ತುಂಬಾ ತಡವಾಗಿತ್ತು. ತಕ್ಷಣ ಆಫೀಸಿಗೆ ಹೊರಟೆ.


ಬಹು ಆಯ್ಕೆ ಪರದಾಟ


ಆಫೀಸಿನಲ್ಲಿ ಹೇಳಿ ಕೇಳಿ ವೀಕ್ ಎಂಡ್, ಮೇಲಿನ್ನು ಪ್ರವಾಸದ ಯೋಚನೆಯಲ್ಲಿ ಮುಳುಗಿಹೋಗಿತ್ತು ಮೈಂಡ್! ಕೆಲಸ ಮಾಡಲು ಮೂಡಿಲ್ಲ. ತೀರ್ಥಹಳ್ಳಿಯ ಕುಪ್ಪಳಿಯನ್ನು ಕೇಂದ್ರವಾಗಿಟ್ಟು ಆಸುಪಾಸಿನ ವೀಕ್ಷಣಾ ಸ್ಥಳಗಳನ್ನು ಗೂಗಲ್ ಮಾಡಿದೆ ಸಾಕಷ್ಟು ದೊರೆಯಿತು. ಈ ಗೂಗಲ್ನ ಅಪಾಯವೆನೆಂದರೆ, ಬೇಕಿದ್ದಕ್ಕಿಂತ ಹೆಚ್ಚಿನ ಮಾಹಿತಿ ದೊರೆತು ನಮ್ಮ ಆಯ್ಕೆಗೇ ಚ್ಯುತಿ ತರುತ್ತದೆ. ನನಗೂ ಹಾಗೆ ಆಯಿತು. ನನ್ನ ಸ್ನೇಹಿತರಿಂದ ಮತ್ತಷ್ಟು ಮಾಹಿತಿ. ಕುವೆಂಪು ಮನೆ, ಮಡಿಕೇರಿ, ಮಂಗಳೂರು, ಕೊಡಚಾದ್ರಿ, ಆಗುಂಬೆ, ಕೊಲ್ಲೂರು, ಹಿದ್ಲುಮನೆ ಜಲಪಾತ, ಉಡುಪಿ, ಕೊಡಗು, ಮೈಸೂರು, ಊಟಿ, ಕೊಡೈಕೆನಾಲ್,ಇನ್ನೂ ಹಲವಾರು. ಇಷ್ತೆಲ್ಲಕ್ಕೂ ಮೀಸಲಾದ ಸಮಯ ಎರಡೇ ದಿನ!

ದಿಕ್ಕು ತೋಚದ ನಾನು ಎಲ್ಲ ಆಯ್ಕೆಗಳನ್ನೂ ಹೊತ್ತು ನೇರ ಮನೆಗೆ ನಡೆದೆ. ಅಪ್ಪನ ಮುಂದೆ ಎಲ್ಲ ಆಯ್ಕೆಗಳನ್ನು ಇತ್ತು ನನ್ನ ಜವಾಬ್ದಾರಿ ಕಳೆದುಕೊಂಡೆ. ಕೊನೆಕ್ಷಣದ ನಿರ್ಧಾರದಿಂದ ಮುನಿದಿದ್ದ ಅಪ್ಪ, ಅದೇ ಸಿಟ್ಟಿನಲ್ಲಿ ಆಯ್ಕೆಗಳನ್ನು ಮೆಲುಕುಹಾಕತೊಡಗಿದರು.ಪರದಾಟ ಒಂದರಮೇಲೊಂದು ವಕ್ಕರಿಸುವಂತೆ ಆಗಲೇಪವರ್ ಕಟ್ ಆಗಿತ್ತು. ಇನ್ನು ಕೆಲವೇ ಘಂಟೆಗಳಲ್ಲಿ ನಾವು ಹೊರಡಬೇಕಿತ್ತು, ಟ್ಯಾಕ್ಸಿಬುಕ್ ಆಗಿತ್ತು,ಚೂಟಿ ಹೊರಡಲು ಅಣಿಯಾಗಿತ್ತು.ಆದರಿನ್ನೂ ಪ್ರವಾಸ ಸ್ಥಳಗಳೇನಿರ್ಧಾರವಾಗಿಲ್ಲ! ಕತ್ತಲಲ್ಲೇ ಕ್ಯಾಂಡಲ್ ಹಚ್ಚಿ ಕರ್ನಾಟಕ ಮ್ಯಾಪ್ ಹಿಡಿದ ಮೊಮೆಂಟ್ ಥ್ರಿಲ್ಲಿಂಗ್ ಆಗಿತ್ತು!

ಹೀಗೆಲ್ಲ ಆಯ್ಕೆ ಸಾಧ್ಯವಿಲ್ಲ ಎಂದರಿತ ಅಪ್ಪ ಕೊನೆಗೂ ಅವರ ಸ್ನೇಹಿತರಿಗೆ ಕಾಲ್ ಮಡಿ, ಅವರ ಹುಟ್ಟೂರಾಗಿದ್ದ ಶಿವಮೊಗ್ಗದ ಆಸುಪಾಸಿನ ವೀಕ್ಷಣಾ ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿದರು. ಇರುವ ಎರಡು ದಿನದಲ್ಲಿ - ಆಗುಂಬೆ, ಸಿರಿಮನೆ ಜಲಪಾತ, ಶೃಂಗೇರಿ ಮತ್ತು ಕುಪ್ಪಳಿ ಕವರ್ ಮಾಡಬಹುದು ಎಂದು ಲೆಕ್ಕವಾಯಿತು. ಕೊನೆಗೂ ಸ್ಥಳಗಳು ಫೈಸಲಾದವು. ಅಷ್ಟರಲ್ಲೇ ನಿದ್ರಾದೇವತೆ ನಮ್ಮನ್ನಾವಾಹಿಸಿದ್ದಳು. ಮುಂಜಾನೆಯೇ ಪ್ಯಾಕಿಂಗ್ ಮಾಡುವ ಸಮೇತ ಸಿದ್ಧರಾದೆವು. ನಮ್ಮ ಸಡವರ ನೋಡಿ ಚೂಟಿಗೆ ತಿಳಿದೇ ಹೋಗಿತ್ತು. ಇವರೆಲ್ಲ ನನ್ನ ಬಿಟ್ಟು ಹೋಗುತ್ತಾರೆ ಎಂಬ ಭೀತಿಯಿಂದ ಮಂಚದ ಕೆಳಗೆ ಹೋಗಿ ಅವಿತಿದ್ದು ಕಂಡು ನಾವೆಲ್ಲಾ ಚಕಿತರಾದೆವು. ಅನುವಾಗಿದ್ದ ಸಮಯಕ್ಕೆ ಟ್ಯಾಕ್ಸಿ ಹಾಜರ್. ಚೂಟಿಯನ್ನು ಅದರ ನಿಗದಿತ ಸ್ಥಳಕ್ಕೆ ತಲುಪಿಸಿ ನಾವು ಹೊರಟೆವು. ಮರಿಯನ್ನು ಬಿಟ್ಟ ಬೇಸರ ಹಾಗು ಪ್ರವಾಸದ ಉತ್ಸಾಹ ಎರಡೂ ಕಲಸುಮೇಲೋಗರವಾಗಿ ಒಂದು ಹೊಸ ಅನುಭವ ತಂದಿತ್ತು.


ಅವಿದ್ಯಾವಂತನ ವೈಚಾರಿಕತೆ


"ಮೇಡಂ, ಬೇಕಾದ್ ಸಿಡಿ ಇಟ್ಕೋಳಿ, ನನ್ ಹತ್ರ ಇಲ್ಲ", ಗಾಡಿ ಸ್ಟಾರ್ಟ್ ಮಾಡುವ ಮೊದಲು ಉಲಿದ ಡ್ರೈವರ್. ಅಪ್ಪನ ಸ್ನೇಹಿತರು ಕಳುಹಿಸಿದ್ದ ಈ ಡ್ರೈವರ್ ಹೆಸರು ಗುಂಡ. ಸಣ್ಣ ಗಾತ್ರದ, ಚಿಕ್ಕ ಗಡ್ಡದ ಈ ವ್ಯಕ್ತಿಯ ವಯಸ್ಸು ಇಪ್ಪತ್ತೈದು ಮೀರಿರದು. ನಮ್ಮ ಪ್ರಯಾಣ ಶುರುವಾದಷ್ಟೇ ವೇಗವಾಗಿ ಸಾಗತೊಡಗಿತು. ಪ್ರಯಾಣ ಸಾಗುತ್ತಾ ಹಾಗೆ ತಿಂಡಿ ತೀರ್ಥದ ಸಮಯವಾಯಿತು. ಗಾಡಿ ನಿಲ್ಲಿಸಿ ಮನೆಯಿಂದ ಅಮ್ಮ ಮಾಡಿ ತಂದಿದ್ದ ತಿಂಡಿ ತಿಂದು ಮುಗಿಸಿದೆವು. ರಸ್ತೆ ಬದಿಯ, ಬಾಳೆ ಎಲೆಯ ಆ ತಿಂಡಿ ಕಾರ್ಯಕ್ರಮ ದೊಡ್ಡ ಹೋಟೆಲ್ ಗಿಂತ ಸುಖವಾಗಿತ್ತು. ದಾರಿಯಲ್ಲಿ ಕಂಡವರ ಜೊತೆಗೆ ಗುಂಡ ಉರ್ದುವನ್ನು ಸುಲಲಿತವಾಗಿ ಮಾತನಾಡುವುದನ್ನು ಕಂಡೆವು. ಅಷ್ಟರಲ್ಲೇ ನಮಗೆ ಸಿಕ್ಕಿತ್ತು ಒಂದು ಮುಸಲ್ಮಾನರ ದರ್ಗಾ. ಗುಂಡನ ಹೇಳಿಕೆಯ ಮೇರೆಗೆ ಎಲ್ಲರೂ ಇಳಿದು ದರ್ಗಾದ ಬಳಿ ಬಂದೆವು. ಒಳಹೊಕ್ಕಳು ಹಿಂಜರಿಯುತ್ತಿದ್ದ ನಾವು "ಓಗ್ಬಹುದು ಓಗ್ರಿ ಒಳಗೆ" ಎಂಬ ಗುಂಡನ ಮಾತು ಕೇಳಿ ಒಳಹೊರಟೆವು. ಅಲ್ಲೊಬ್ಬ ಮುಸಲ್ಮಾನ ಪಾದ್ರಿ ಅವರ ದೇವರಾದ ಸಮಾಧಿಯ ಎದುರು ಕುಳಿತಿದ್ದರು. ಆ ದರ್ಗಾ ಬಾಬಾಬುಡನ್ ಗಿರಿಗೆ ಸುರಂಗ ಮಾರ್ಗ ಎಂಬ ಅಂಬೋಣ! ನವಿಲುಗರಿಯ ಆಶೀರ್ವಾದದೊಂದಿಗೆ ದೇವರಿಗೆ ಬೆನ್ನು ಮಾಡದಂತೆ ವಂದಿಸಿ ನಾವು ಹಿಂತಿರುಗಬೇಕಿತ್ತು. ಇದು ಗುಂಡನ ಆದೇಶ!

ಮತ್ತೆ ಗುಂಡನ ಉರ್ದು ಚಮಕಿಯನ್ನು ಕಂಡ ನನಗೆ ಕುತೂಹಲ ತಡೆಯಲಾಗಲಿಲ್ಲ. "ನೀವು ಉರ್ದು ಇಷ್ಟು ಚೆನ್ನಾಗಿ ಮಾತನಾಡುತ್ತೀರಿ" ಎಂದೆ. ಅವನು, "ಮೇಡಂ, ನಾವು ಮುಸ್ಲಿಮ್ಸು" ಎಂದ! ಆ ಮಾತಿನಿಂದ ನಾನು ದಂಗಾದೆ! "ಮತ್ತೆ ಹೆಸರು?" ಕೇಳಿದೆ ನಾನು. "ಮೊಹಮ್ಮದ್ ಹುಸೇನ್ ನನ್ನೆಸ್ರು, ಆದ್ರೆ ಎಲ್ರೂ ಕರಿಯೋದು ಗುಂಡ, ಯಾಕೆ ಅಂದ್ರೆ ನಂಗೆ ಚಿಕ್ಕಂದ್ನಲ್ಲಿ ತಲೇಲಿ ಕೂದಲೇ ಇರಲಿಲ್ಲವಂತೆ" ಎಂದು ಹೇಳಿ ನಕ್ಕ. ಅವನ ಕನ್ನಡ ಭಾಷೆಯ ಸುಲಲಿತತೆ ಭಾಗಶಃ ಕನ್ನಡಿಗರಿಗೂ ಇಲ್ಲವೇನೋ ಎಂಬಂತೆ ಇತ್ತು. ಇದನ್ನು ಕೇಳಿ ಬೆರಗಾಗಿ ಅಪ್ಪ ಅವನನ್ನು ಮತ್ತಷ್ಟು ಮಾತಿಗೆಳೆದರು. ಆಗ ಅವನು "ಸಾರ್, ನಂದೊಂದು ದೊಡ್ಡ ಸ್ಟೋರಿ" ಎಂದು ಹೇಳಿ ಪ್ರಾರಂಭಿಸಿದ. ಮುಸಲ್ಮಾನನಾದ ಅವನು ಒಬ್ಬ ಕುರುಬ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಈ ಹಿಂದೂ ಮುಸ್ಲಿಂ ಸಮಾಗಮವನ್ನು ಒಪ್ಪದ ಜನರಿಂದ ದೂರವಾಗಿದ್ದ. ಅಂತರ್ ಜಾತಿಯಲ್ಲ, ಅಂತರ್ ಮತೀಯತೆಗೂ ಮೀರಿತ್ತು ಈ ಹೆಚ್ಚೇನೂ ವಿದ್ಯಾವಂತನಲ್ಲದವನ ಜಾತ್ಯಾತೀತತಾ ಮನೋಭಾವ! "ಏನ್ ಸರ್, ಈ ಜಾತಿ ಇದೆಲ್ಲಾ ನಾವೇ ಮಾಡ್ಕೊಂಡಿದ್ದು ಅಲ್ವಾ" ಎಂದು ಹೇಳಿ ಅವನು ತನ್ನ ಹೆಂಡತಿಯ ಗುಣಗಾನಕ್ಕಿಳಿದ. ನನ್ನ ಮನಸ್ಸಿನ್ನೂ ಅದೇ ಹಿಂದೂ-ಮುಸ್ಲಿಂ ಕತೆಯನ್ನು ಗುನುಗಿತ್ತು.

ಈ ಅವಿದ್ಯಾವಂತ ಹುಡುಗನಷ್ಟೇ ಸರಳವಾಗಿ ಜನ ಯಾಕೆ ಆಲೋಚಿಸಬಾರದು? ಜನ ವಿದ್ಯಾವಂತರಾಗುತ್ತಾ, ಸುಸಂಸ್ಕೃತರಾಗುತ್ತಾ ನ್ಯಾರೋ ಮೈಂಡ್ ಆಗ್ತಾರೆ ಅನ್ನೋ ಅಪ್ಪನ ಮಾತು ನೆನಪಾಯಿತು. ನಿಜವೆನಿಸಿತು. ಅವನ ಹೆಂಡತಿ ಬಗೆಗಿನ ಪ್ರೀತಿ ತುಂಬಿದ ಮಾತುಗಳು ನಮಗೆಲ್ಲರಿಗೂ ಪ್ರಿಯವಾಗಿತ್ತು. ಅವನ ಮುಗ್ಧತೆಯ, ಒಳ್ಳೆಯತನಕ್ಕೆ ಅಷ್ಟೇ ಗೌರವ ಹೆಚ್ಚಿತ್ತು. ಪ್ರಯಾಣ ಮುಂದೆ ಸಾಗಿತ್ತು.


ಭದ್ರವಾದ ಭದ್ರಾವತಿ ಅಣೆಕಟ್ಟು


ಆಗುಂಬೆಯತ್ತ ಮುಖಮಾಡಿದ್ದ ನಮಗೆ ನಡುವಿನಲ್ಲಿ ದೊರೆತ ಮತ್ತೊಂದು ಪ್ರಸಾದ ಭದ್ರಾವತಿ ಅಣೆಕಟ್ಟು. ಪ್ರಕೃತಿ ಸೌಂದರ್ಯಕ್ಕೆ ಹಾತೊರೆದಿದ್ದ ಮನ, ಆ ಪ್ರಕೃತಿಯನ್ನು ಚೌಕಟ್ಟಾಗಿಸುವ ವಿಜ್ಞಾನದ ಕಡೆ ಮುಖಮಾಡಲು ಮೊದಲಿಗೆ ಇಚ್ಚಿಸಲಿಲ್ಲ. ಆದರೂ ಅಪ್ಪನಿಗಿದ್ದ ನೀರಾವರಿ ಯೋಜನೆಗಳ ಬಗೆಗಿನ ಆಸಕ್ತಿಯ ಮೇರೆಗೆ ಭದ್ರಾವತಿ ಅಣೆಕಟ್ಟನ್ನು ಆವಿಷ್ಕರಿಸಲು ಹೊರಟೆವು. ಅದನ್ನು ತಲುಪಿದ ನಂತರ ತಿಳಿಯಿತು ನನ್ನ ಭಾವ ತಪ್ಪೆಂದು. ಆ ಸುನೀಲವಾದ ಅಗಾಧವಾದ ಭದ್ರಾವತಿ ನದಿಯ ಸೊಬಗಿಗೆ ಕಣ್ಮನ ತಣಿಯಿತು. ಕಂಡಷ್ಟೂ ಕಾಣುವಂತ ಆ ವಿಸ್ತೃತ ಜಲಧಾರೆಗೆ ಮತ್ತಾ ಭದ್ರ ನಿರ್ಮಿತ ಕಟ್ಟಡಕ್ಕೆ ಮನದಲ್ಲೇ ಮಣಿದು ಅಲ್ಲಿಂದ ಹೊರಟೆವು.
ಹಾದಿಯಲ್ಲಿ ಕಂಡ ಮತ್ತೊಂದು ಅಣೆಕಟ್ಟು, ಗಾಜನೂರಿನದು. ಭದ್ರಾವತಿಯಷ್ಟು ವಿಸ್ತಾರವಾಗಿ, ಮಜಬೂತಾಗಿಲ್ಲದಿದ್ದರೂ ತನ್ನದೇ ಆದ ಆಕರ್ಷಣೆಯನ್ನು ಹೊಂದಿತ್ತು. ಅಲ್ಲಿಂದ ಹೊರಟ ನಾವು ನಡುವೆ ಉದರ ಪೂಜೆಯನ್ನು ಮುಗಿಸಿ ಪ್ರಯಾಣ ಮುಂದುವರೆಸಿದೆವು.




ಆಗುಂಬೆಯಾ... ನಿರಾಶೆ ಸಂಜೆಯಾ!


ಆಗುಂಬೆಯೆಡೆಗೆ ಮುಖಮಾಡಿ ಹೊರಟ ನಮಗೆ ನಡುವೆ ಕೆಲವು ವೀಕ್ಷಣಾ ಸ್ಥಳಗಳು ದೊರೆತರೂ, ಆಗುಂಬೆಯ ಸೂರ್ಯಾಸ್ತ ತಪ್ಪಿಹೊಗಬಾರದೆಂಬ ಆತಂಕದಿಂದ ಎಲ್ಲವನ್ನೂ ಬಿಟ್ಟು ನೇರ ಪಯಣ ಮುಂದುವರೆಸಿದೆವು. ಕಾಡಿನ ನಮ್ಮ ಪಯಣ ಸಾಗುತ್ತಾ ಹೋದಂತೆ, ಆ ವನರಾಶಿಯ ಸಿರಿತನ, ನೀರವತೆ ಮತ್ತು ಗಾಂಭೀರ್ಯತೆಯನ್ನುಣ್ಣುತ್ತಾ ಕಳೆದುಹೋಗಿದ್ದೆವು. ಪ್ರಕೃತಿ ದೇವತೆ ನಮ್ಮನ್ನು ಪ್ರೇಮದಿಂದ ತನ್ನ ಮಡಿಲಿಗೆ ಸ್ವೀಕರಿಸಿದಂತಾ ಅನುಭೂತಿ! ಸಂಜೆಗತ್ತಲಾಗುವ ಮುನ್ನ ಆಗುಂಬೆ ತಲುಪುತ್ತೆವೆಯೋ ಎಂಬ ಅನುಮಾನ, ತರಾತುರಿ.

ಕೊನೆಗೂ ಸಿಕ್ಕಿತು ನಮ್ಮ ಡೆಸ್ಟಿನೇಶನ್ ಪಾಯಿಂಟ್ ಆಗುಂಬೆ. ಸೂರ್ಯಾಸ್ತಮಾನಕ್ಕೆ ಸಾಕಷ್ಟು ಸಮಯವಿತ್ತು. ವ್ಯೂ ಪಾಯಿಂಟ್ ತಲುಪಿ ಸುತ್ತೆಡೆಯ ಮನೋಹರ ದೃಶ್ಯವನ್ನು ಆನಂದಿಸತೊಡಗಿದೆವು. ಪ್ರಕೃತಿಯ ರಮಣೀಯ ದೃಶ್ಯ, ಎಲ್ಲೆಡೆ ಹಸಿರ ಸಿರಿ. ಸೂರ್ಯನ ಅಸ್ತಮಾನದ ನಿರೀಕ್ಷೆಯ ಜೊತೆಗೆ ಜನಜಂಗುಳಿಯೂ ಹೆಚ್ಚುತ್ತಿತ್ತು. ಅಲ್ಲಿ ನೆರೆದಿದ್ದ ಎಲ್ಲರೂ ಏಕತಾನದಿಂದ ಕಾಯುತ್ತಿದ್ದುದು ಬೆಳಕನೀವ ಭಾನುವನ್ನು ಮುಳುಗಿಸುವುದಕ್ಕೆ? ಹೀಗೆ ಯೋಚಿಸಿ ನಗು ಬಂತು. ಸೂರ್ಯ ಮುಳುಗಿ, ಆಗಸದ ಮರೆಯಲ್ಲಿ ಲೀನವಾಗಿ ಕತ್ತಲೆಯನ್ನಬ್ಬುವುದು ನಿಜಕ್ಕೂ ಸಂತೋಷದ ವಿಷಯವೇ? ಎಂಬ ಕನ್ಫ್ಯೂಶನ್ ನಲ್ಲಿದ್ದ ನನಗೆ, ಆಗಷ್ಟೇ ವಾನರ ಸೈನ್ಯದಂತೆ ನೆರೆದಿದ್ದ ಕಾಲೇಜ್ ಹುಡುಗ ಹುಡುಗಿಯರ ಗುಂಪೊಂದು ನೆಲೆಸಿದ್ದು ಅರಿವಾಯಿತು. ಅವರ ನಗು, ಚೀರಾಟ, ಒಬ್ಬರನ್ನೊಬ್ಬರು ಕೆಣಕುವ ಬಗೆ, ಕೇರ್ ಫ್ರೀ ಆಟಿಟ್ಯೂಡ್ ನಮ್ಮನ್ನು ಸಿಟ್ಟಿಗೆಬ್ಬಿಸಿದರೂ, ಒಳ್ಳೆಯ ಟೈಮ್ ಪಾಸ್ ಆಗಿತ್ತು. ಅವರ ಮಾತುಗಳ ಬೇಸ್ ನಲ್ಲಿ ಕಥೆಗಳನ್ನು ಹೆಣೆಯುತ್ತಾ ಹೋದಂತೆ ಸೂರ್ಯಾಸ್ತದ ಸಮಯ ಹತ್ತಿರವಾಗಿತ್ತು.

ಕೊನೆಯವರೆಗೂ ನಮ್ಮ ಸಾಥ್ ನೀಡಿದ ಸೂರ್ಯ ಇನ್ನೇನು ಮುಳುಗಬೇಕು ಎಂದಾಗ ಮೋಡದ ಮರೆಯಾಗಿ ನಮ್ಮೆಲ್ಲರಿಗೂ ಚಳ್ಳೆ ಹಣ್ಣು ತಿನ್ನಿಸಿದ. ಅಷ್ಟೆಲ್ಲಾ ನಿರೀಕ್ಷಿತರಾದ ನಾವು ನಿರಾಶೆಯಾಗಿ ಹಿಂತಿರುಗಿದೆವು. ಆದರೂ ಸ್ಥಳಮಹಿಮೆಯೆಮ್ಬಂತೆ ಪ್ರಕೃತಿಯ ನೋಟದಿಂದ, ಅದರ ಅನುಭವದಿಂದ ನಾವು ಸಂತ್ರುಪ್ತರಾಗಿದ್ದೆವು. ಆಗುಂಬೆಯಿಂದ ಶೃಂಗೇರಿಯತ್ತ ನಮ್ಮ ಮುಂದಿನ ಪಯಣ.

(ಮುಂದುವರೆದಿದೆ...)

2 comments:

sunaath said...

ಸಂಯುಕ್ತಾ,
ತುಂಬ interesting ಆಗಿ ಬರೆದಿದ್ದೀರಿ. ಓದುತ್ತಾ ಇದ್ದಂತೆ family atmosphere ನಮ್ಮನ್ನೂ ಸಹ ಆವರಿಸುತ್ತದೆ.
ಪ್ರವಾಸದ ಮುಂದಿನ ಭಾಗವನ್ನು ಓದಲು ಕಾತರದಿಂದ ಇದ್ದೇನೆ.

kanasu said...

thank you sunaath kaka :)